stat Counter



Friday, November 14, 2014

ಡಾ / ಸ. ಚ .ನಾಗಲೋಟಿಮಠ -ನನಗೆ ತುಂಬ ಸಂತೋಷ ಆದದ್ದು ಯಾವಾಗ ಅಂದ್ರೆ ....

ಡಾ ಸ (ಸದಾಶಿವಯ್ಯ) ಜ (ಜಂಬಯ್ಯ) ನಾಗಲೋಟಿಮಠ ಈ ದೇಶ ಕಂಡ ಅತ್ಯುತ್ತಮ ವೈದ್ಯರು, ವೈದ್ಯವಿಜ್ಞಾನಿಗಳು, ವೈದ್ಯಶಿಕ್ಷಕರು. ಮೇಲಾಗಿ ಹೃದಯವಂತ ವ್ಯಕ್ತಿ. ಅವರ ಜೀವನದ ಒಂದು ಘಟನೆಯನ್ನು ಇಲ್ಲಿ ಹಾಕುತ್ತಿದ್ದೇನೆ:
ಬಹಳ ಕಷ್ಟದಲ್ಲಿ ಇವರು ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಓದುತ್ತಿದ್ದರು. ಹಳ್ಳಿಯಲ್ಲಿ (ಬನಹಟ್ಟಿ)ಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಇವರ ತಾಯಿ ತನಗೆ ಕ್ಯಾನ್ಸರ್ ಆಗಿರುವುದನ್ನು ಹೇಳುವುದೇ ಇಲ್ಲ. ಹೇಳಿದರೆ ಎಲ್ಲಿ ಓದು ನಿಲ್ಲುತ್ತದೋ ಎಂಬ ವ್ಯಥೆ, ಆಕೆಗೆ. ಇವರಿಗೆ ಗೊತ್ತಾಗುವಷ್ಟರಲ್ಲಿ ತಡವಾಗಿರುತ್ತದೆ. ಮುಂದೆ ಅವರ ಮಾತುಗಳಲ್ಲೆ ಕೇಳಿ: "ತಾಯಿಯನ್ನು ಹುಬ್ಬಳ್ಳಿಗೆ ಕರೆದೊಯ್ದು ನನಗೆ ಕಲಿಸುತ್ತಿದ್ದ ಡಾ ಕವಲಗುಡ್ಡ ಮತ್ತು ಡಾ ಪಿ ವಿ ಹೆಗಡೆಯವರಿಗೆ ತೋರಿಸಿದೆ. ಪರೀಕ್ಷೆಯನ್ನೆಲ್ಲ ಮುಗಿಸಿ ಅವರು ಹೇಳಿದರು: 'ನೋಡಪ, ತಮ್ಮ ಕ್ಯಾನ್ಸರ್‍ ಇರುವುದು ಖರೆ. ಭಾಳ ಬೆಳದದೆ. ಒಳಗೆ ಎಲ್ಲ ಕಡೆಗೂ ಹರಡಿದೆ. ಏನೂ ಮಾಡಲು ಬಾರದು. ಒಂದು ಸಾಧ್ಯತೆ ಇದೆ. ಮುಂಬೈ ಟಾಟಾ ಆಸ್ಪತ್ರೆಯಲ್ಲಿ ಪಿ.ಬಿ. ದೇಸಾಯಿ ಎಂಬ ದೊಡ್ಡ ಸರ್ಜನ್ ಇದ್ದಾರೆ. ನಿಮ್ಮ ತಾಯಿಗೆ ಆಪರೇಷನ್‍ ಮಾಡಿದರೆ ಅವರೊಬ್ಬರಿಗೆ ಮಾತ್ರ ಸಾಧ್ಯ. ಒಂದು ಟಪಾಲು ಬರೆದುಕೊಡುತ್ತೇನೆ. ಹೋಗಿ ಬಾ'. ಇವರು ಹೋಗುತ್ತಾರೆ. ಆದರೆ, ಅವರೂ ಆಪರೇಷನ್‍ ಸಾಧ್ಯವಿಲ್ಲ ಎಂದು ಹೇಳಿ ರೇಡಿಯೇಷನ್‍ ಕೊಡಲು ಸಲಹೆ ಮಾಡಿದರು. ಇವರು ಬಡವರು ಎಂದು ತಿಳಿದು. ಪುಕ್ಕಟೆ ಕೊಡಲು ಬರೆದರು. ಅದು ಮುಗಿದ ಮೇಲೆ ನೋವು ನಿವಾರಕವಾಗಿ ಮಾರ್ಫಿನ್‍ ಇಂಜೆಕ್ಷನ್‍ಗಳನ್ನು ಕೊಟ್ಟು ಕಳಿಸಿದರು.
ಮುಂದೆ, ಇವರು ವೈದ್ಯರಾಗಿ, ದೇಶದ ಹೆಸರಾಂತ ಪೆಥಾಲಜಿಸ್ಟ್ ಎಂದು ಹೆಸರುಗಳಿಸಿದರು. ಕ್ಯಾನ್ಸರ್‍ ಪತ್ತೆಗೆ ಅನುಕೂಲವಾಗುವ ಪರೀಕ್ಷೆ ಕಂಡುಹಿಡಿದರು. ಅದು ಜೀವಕೋಶ ತಳಶೇಖರಣ ವಿಜ್ಞಾನ (ಸೆಡಿಮೆಂಟ್‍ ಸೈಟಾಲಜಿ) ಎಂಬ ವಿಭಾಗವನ್ನೇ ಹುಟ್ಟುಹಾಕಿತು. ಇವರ ಒಂದು ಸಂದರ್ಶನವನ್ನು ಧಾರವಾಡ ಆಕಾಶವಾಣಿ ಪ್ರಸಾರ ಮಾಡಿತು. ಅದರಲ್ಲಿನ ಭಾಗ:
ಡಾ ಬಸವರಾಜ ಸಾದರ (ಆಕಾಶವಾಣಿಯವರು): ನಿಮಗ ತುಂಬ ಸಂತೋಷವಾಗಿದ್ದು ಯಾವಾಗ?
ಡಾ ನಾಗಲೋಟಿ ಮಠ: ಅಮ್. ನನಗ ತುಂಬ ಸಂತೋಷ ಆಗಿದ್ದು ಅಂದ್ರ ನಮ್‍ ತಾಯಿ ಸತ್ತಾಗ್‍
ಸಾದರ: ಓಹೋ! ಇದು ಭಾಳ ಲೋಕ ವಿರೋಧಿ ಅದೆ...
ಡಾ ನಾಗಲೋಟಿಮಠ: ಹೌದ್‍. ಯಾಕ.. ತಾಯಿಗ್ ಕ್ಯಾನ್ಸರ್‍ ಆಗಿತ್ತು. ಆಕಿ ಮುಂದ ಕೂತಂದ್ರ ನಮಗ ಜಡ್ಡು ಹಿಡಿದಂಗ ಆಗತಿತ್ತು. ಅಷ್ಟ್ ತ್ರಾಸಿತ್ತು ನೋಡ್ರಿ ಆಕಿಗೆ. ಎಂದ್‍ ಸಾಯ್ತಾಳೋ ಅಂತ ಕಾದಿದ್ನಿ. ಸತ್ಲು. ಎದ್‍ ಬಿಟ್ನಿ... ಭಾಳ ಹೊತ್ತಾದ್ ಮೇಲೆ ಅಳು ಬಂತ್.
ಬಿಚ್ಚಿದ ಜೋಳಿಗೆ, ಡಾ ಸಜ ನಾಗಲೋಟಿಮಠರ ಆತ್ಮಕತೆ, ಸಾಹಿತ್ಯ ಪ್ರಕಾಶನ, ಬೆಲೆ ರೂ ನೂರ ಐವತ್ತು
ಕೊನೆಯಭಾಗ: ಜೀವಧಾರೆ ಡಾ ನಾಗಲೋಟಿಮಠ ಅಭಿನಂದನ ಗ್ರಂಥ, ಸಜನಾ ಅಭಿನಂಧನ ಸಮಿತಿ, ಕಲುಬುರ್ಗಿ, ಬೆಲೆ ರೂ ಮುನ್ನೂರ ಐವತ್ತು.
ನೂರಾರು ವ್ಯಕ್ತಿತ್ವವಿಕಸನದ ಪುಸ್ತಕಗಳಿವೆ. ಲಕ್ಷಾಂತರ ಪ್ರತಿಗಳು ಖರ್ಚಾಗುತ್ತವೆ (ಲಕ್ಷಾಂತರ ಜನರ ವ್ಯಕ್ತಿತ್ವ ವಿಕಸನವಾಗಿದೆಯೇ ಎಂಬ ಪ್ರಶ್ನೆ ಬೇರೆ!) ಆದರೆ, ಬಿಚ್ಚಿದ ಜೋಳಿಗೆಯಂತಹ ಒಂದು ಪುಸ್ತಕ ಇಂತಹ ಸಾವಿರ ಪುಸ್ತಕಗಳು ಮಾಡಲಾರದ್ದನ್ನು ಮಾಡುತ್ತದೆ.
UnlikeUnlike ·  · 
  • Kalgundi Naveen ಅವರ FACE BOOK  ನಿಂದ 

No comments:

Post a Comment