stat Counter



Saturday, March 26, 2016

ಸುಬ್ರಾಯ ಚೊಕ್ಕಾಡಿಯವರ ಕವನ ಸಂಕಲನ - " ಇದರಲ್ಲಿ ಅದು " -ಮುರಳೀಧರ ಉಪಾಧ್ಯ

ಅದೊಂದು ಪುಟ್ಟ ಪೇಟೆ. ಅಲ್ಲಿನ ದೇವಾಲಯದ ಅರ್ಚಕರ ಹಳೇ ಕಾಯಿಲೆಗೆ ಮದ್ದು ನೀಡಲು ಒಬ್ಬಹಕೀಮ ಬಂದಿದ್ದಾನೆ. ಈ ಮುದಿ ವೈದ್ಯ ಜಾತಿ-ಮತಗಳನ್ನು ಮೀರಿ ಅರ್ಚಕರ ಆತ್ಮೀಯನಾಗಿದ್ದಾನೆ. ಯಾರೋ ಕಿಡಿಗೇಡಿಗಳು ಧಾರ್ಮಿಕ ಗುರುವೊಬ್ಬರಿಗೆ ಕಲ್ಲೆಸೆದುದರಿಂದ ಆ ಪೇಟೆಯಲ್ಲಿ ಕೋಮು ಗಲಭೆ ಆರಂಭವಾಗುತ್ತದೆ. ಮುಖವಾಡಗಳು ಕಳಚುತ್ತವೆ. ಜೀವ ಚಿಮ್ಮುವ ನಗರ ’ ಅಳುವ ವಿಧವೆಯಾಗುತ್ತದೆ. ’ಬಂಧುಗಳೇ ಆತ ತಾಯಿಗಳಾಗುತ್ತಾರೆ. ಅರ್ಚಕರು ತನ್ನ ವೈದ್ಯಮಿತ್ರ ಅಬ್ದುಲ್ಲರನ್ನು ಮತಾಂಧರಿಂದ ರಕ್ಷಿಸಲು ನಿರ್ಧರಿಸುತ್ತಾರೆ. ಅವನನ್ನು ಗರ್ಭಗುಡಿಯೊಳಗೆ ನೂಕಿ ಬೀಗ ಹಾಕುತ್ತಾರೆ. ಕವನದ ಕೊನೆಯ ಸಾಲುಗಳಿವು.-
"ದ್ವಾರ ಕಳಚಿತು-ಅರರೆ-ಅಗೋ ನಗುವ ಅಲ್ಲಾಹು|
ಅಲ್ಲ, ಶಿವ, ಅರ್ಚಕನೇ? ವೈದ್ಯನಾಗಿ
ಎಲ್ಲ ಕಟ್ಟಲೆಗಳನು ಮೀರಿ ಅದೋ ಕಾಣಿಸಿತು ಒಂದು ಇನ್ನೊಂದಾಗಿ ಒಂದೇ ಆಗಿ|"
’ ಒಂದು’ ಎಂಬ ಹೆಸರಿನ ಈ ಕವನ ಚೊಕ್ಕಾಡಿಯವರ ಇತ್ತೀಚಿಗಿನ ಒಂದು ಪ್ರಬುದ್ಧ ಕವನ. ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿರುವ ಇದರಲ್ಲಿ ಅದು’ ಕವನಸಂಕಲನದಲ್ಲಿ ನಲುವತ್ತೈದು ಕವನಗಳಿವೆ.

ಈ ಸಂಕಲನದಲ್ಲಿ ಕವಿ ಚೊಕ್ಕಾಡಿ ತನ್ನೂರಿನ ಹಕ್ಕಿಗಳ ಕುರಿತು ಬರೆದಿದ್ದಾರೆ. ಖಳರಿಂದ ತುಂಬಿದ ಸಮಾಜದಲ್ಲಿ ಬದುಕು ತ್ತಿರುವ ಈ ಕವಿಗೆ ಖಗಗಳು ಜೀವನೋತ್ಸಾಹದ ಪಾಠವನ್ನು ಕಲಿಸುತ್ತಿವೆ. ಹಕ್ಕಿಗಳ ಪುಟ್ಟ ವಿಶ್ವವನ್ನು ಕಂಡು ಬೆರಗಾದ ಕವಿ " ಈ ವಿಶೇಷದ ಎದುರು ನಾನಾದೆ ಶೇಷ’ ಎನ್ನುತ್ತಾರೆ. ಕವಿತೆ ಕವಿಯ ಬಳಿ ಬಂದು," ಕೊಡಿ ನನಗೆ-ಹಕ್ಕಿಗಳ ಲಘಿಮಾ ಕೌಶಲ್ಯವನ್ನು ಎಲ್ಲ ಕಡೆ ವ್ಯಾಪಿಸಬಲ್ಲ ಪರಿಮಳಿತ ಪ್ರೀತಿಯನ್ನು " ಎಂದು ಬೇಡುತ್ತದೆ.’ ಇದರಲ್ಲಿ ಅದ” ಒಂದು ಒಳ್ಳೆಯ ಪರಿಸರ ಕವನಗಳ ಸಂಕಲನ. ನಿಸರ್ಗ ಮತ್ತು ಮನುಷ್ಯ ಹಾಗೂ ಮನುಷ್ಯರೊಳಗಿನ ಸಂಬಂಧಗಳನ್ನು ಕುರಿತ ಪ್ರಬಂಧ ಧ್ವನಿ ಈ ಸಂಕಲನದಲ್ಲಿ ಕೇಳಿಸುತ್ತದೆ. ಕವಿಚೊಕ್ಕಾಡಿ ಹಕ್ಕಿಗಳ ಲಘಿಮಾ ಕೌಶಲವನ್ನು ಕಲಿತು ಸಮಕಾಲೀನ ರಾಜಕೀಯ್ದ ಬಗ್ಗೆ ಧ್ಯಾನಿಸುತ್ತಿದ್ದಾರೆ.
"ಹೊನ್ನಿನ ಹರಿವಾಣವಾದ, ಬಾನ ಅಂಚಲ್ಲಿ ಚಿನ್ನದ ರಂಗೋಲಿಯಾದ" (ಬೆಳಕು) ಇಂಥ ಕೆಲವು ಒಳ್ಳೆಯ ಭಾವಗೀತೆಗಳು, ಡಬ್ಲ್ಯೂ ಬಿ. ಯೇಟ್ಸ್, ಅನ್ನಾ ಅಹ್ಮತೋವಾ, ಗೇಬ್ರಿಯಲ್ ಒಕಾರಾ ಅವರ ಹಲವು ಕವನಗಳ ಭಾಷಾಂತರಗಳೂ ಈ ಸಂಕಲದಲ್ಲಿವೆ.
ಮುರಳೀಧರ ಉಪಾಧ್ಯ ಹಿರಿಯಡಕ
{ ಉದಯವಾಣಿ -1996 ]
ಇದರಲ್ಲಿ ಅದು- ಸುಬ್ರಾಯ ಚೊಕ್ಕಾಡಿ
- ಸುಬ್ರಾಯ ಚೊಕ್ಕಾಡಿ,
-ಅಕ್ಷರ ಪ್ರಕಾಶನ
ಹೆಗ್ಗೋಡು-577417
 ಮೊದಲ ಮುದ್ರಣ -1996
  ಬೆಲೆ -ರೂ- 30,

No comments:

Post a Comment